?ಕಸ್ತೂರಿ ವಚನ ವೈಭವಕ್ಕೆ ೫೦ರ ಸಂಭ್ರಮದ ಸಿಂಚನ?
Posted date: 14/December/2008

 

’ಕಸ್ತೂರಿ ವಚನ ವೈಭವ ಯಶಸ್ವಿಯಾಗಿ ೫೦ ಸಂಚಿಕೆಗಳನ್ನು ಪೂರೈಸಿ ೧೦೦ರತ್ತ ದಾಪುಗಾಲಿಡುತ್ತಿದೆ.

ಕನ್ನಡದ ಅನರ್ಘ್ಯ ಗಣಿ ವಚನ ಸಾಹಿತ್ಯವನ್ನಾಧರಿಸಿದ ಈ ಕಾರ್ಯಕ್ರಮ ಕನ್ನಡದ ಹೆಮ್ಮೆಯ ಪ್ರತೀಕ ’ಕಸ್ತೂರಿ ವಾಹಿನಿ’ಯಲ್ಲಿ ಸೋಮವಾರದಿಂದ ಶನಿವಾರದವರೆಗೂ ಪ್ರತಿ ದಿನ ಮುಂಜಾನೆ ೭-೦೦ ಗಂಟೆಯಿಂದ ೭-೩೦ರವರೆಗೂ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ ವೈಶಿಷ್ಟವೆಂದರೆ, ವಚನ ನಿರ್ವಚನ ಮತ್ತು ಗಾಯನ. ಇನ್ನೊಂದು ವಿಶೇಷವೆಂದರೆ, ಬಳಕೆಯಾದ ಯಾವುದೇ ವಚನ ಮುಂದಿನ ಸಂಚಿಕೆಗಳಲ್ಲಿ ಪುನರ್ಬಳಕೆಯಾಗದೇ ಹೊಸ ವಚನವನ್ನು ಆಯ್ದುಕೊಳ್ಳುವುದು. ಮಠ ಪರಂಪರೆಯ ಜಗದ್ಗುರುಗಳು ಹಾಗೂ ಸ್ವಾಮೀಜಿಗಳು ವಚನಗಳನ್ನು ಉದಾಹರಿಸುವ ಮೂಲಕ ಪ್ರಸ್ತುತ ಸಮಾಜಕ್ಕನುಗುಣವಾಗಿ ವ್ಯಾಖ್ಯಾನಿಸಿ, ಅ ವಚನಗಳನ್ನೆ ಸುಶ್ರಾವ್ಯವಾಗಿ ಹಾಡುವ ಮೂಲಕ ಗಾಯಕರು ಗಾನಸುಧೆ ಹರಿಸುತ್ತಿದ್ದಾರೆ.

ಒಂದು ಧರ್ಮ-ಜಾತಿಗೆ ಸೀಮಿತವಾಗದಂತೆ ಬದುಕಿ ಬಾಳಿದ ಶರಣರು ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಗಳನ್ನು ತಮ್ಮ ರಚನೆಗಳಲ್ಲಿ ಕಂಡರಸಿದ್ದಾರೆ. ಆಧುನಿಕ ಮಾನವನ ಗೊಂದಲದ ಹಾಗೂ ಧಾವಂತದ ಬದುಕಿಗೆ ವಚನಗಳು ಹೇಗೆ ನೆಮ್ಮದಿಯ ತಾಣಗಳಾಗಿವೆ ಎಂಬುದನ್ನೂ, ವ್ಯಕ್ತಿತ್ವ ವಿಕಸನ, ಜ್ಞಾನಾಭಿವೃದ್ದಿಯ ಜೊತೆಜೊತೆಗೇ ಮಾನವೀಯ ಮೌಲ್ಯಗಳನ್ನು ಹೇಗೆ ಸಾಕಾರಗೊಳಿಸಬಹುದೆಂಬುದನ್ನೂ ತಿಳಿಸುತ್ತ ಈ ಕಾರ್ಯಕ್ರಮ ಸಮಾಜಮುಖಿ ಚಿಂತನೆ ನಡೆಸುತ್ತ ಮುನ್ನಡೆಯುತ್ತಿದೆ.

ನಡೆ-ನುಡಿ-ಸಿದ್ದಾಂತ, ಕಾಯ-ಕಾಯಕನಿಷ್ಟೆ, ತನು-ಮನ-ಭಾವಶುದ್ಧಿ, ಸಾಮಾಜಿಕ ಹಾಗೂ ಪ್ರಸಾದ ಪ್ರಜ್ಞೆ, ಶುದ್ಧಾಂತಕ್ಕರಣ, ಸರ್ವರಲ್ಲೂ ಪ್ರೇಮ-ಇಂಥ ಗುಣಾತ್ಮಕ ಅಂಶಗಳನ್ನು ಬಿತ್ತರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಶಿವಶರಣರು ಸಾರಿದ ವಿಶ್ವ ಸಂದೇಶಗಳು ಹಿಂದೆಂದಿಗಿಂತಲೂ ಇಂದು ತೀರಾ ಪ್ರಸ್ತುತವಾಗಿವೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅನಿವಾರ್ಯವಾಗಿವೆ. ಇಂದಿನ ಅಸಂಘಟಿತ ಹಾಗೂ ವಿಘಟಿತ ಜೀವನ ಶೈಲಿಗೆ ಒಟ್ಟಂದದ ಬೆಸುಗೆ ಹಾಕಲು ಅತ್ಯಗತ್ಯವಾಗಿವೆ.

ಮೇಲಿನ ಈ ಎಲ್ಲ ಕಾರಣಗಳಿಗಾಗಿ ಕನ್ನಡ ನಾಡಿನ ಜೀವನಾಡಿಗಳಾದ ವಚನಗಳನ್ನು ಮತ್ತು ಅವುಗಳ ಲೋಕನೀತಿಯನ್ನು ಜನಮಾನಸದಲ್ಲಿ ಮೂಡಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ಕಸ್ತೂರಿ ವಚನ ವೈಭವ. ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ ಜನಮನ್ನಣೆ ಪಡೆದು ಅತ್ಯುತ್ತಮ ಕಾರ್ಯಕ್ರಮವಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ಹಾಗೂ ಸಂತೋಷದ ಸಂಗತಿಯಾಗಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed